ಮಹಾಮೇರು ಪಂಚಮುಖಿ ಗಣೇಶ ದೇವಸ್ಥಾನವು ಕರ್ನಾಟಕದ ಬೆಂಗಳೂರು ಜಿಲ್ಲೆಯ ಕೆಂಗೇರಿಯಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ತನ್ನ ಛಾವಣಿಯ ಮೇಲಿರುವ ಪಂಚಮುಖಿ ಗಣೇಶನ ಪ್ರತಿಮೆಗೆ ಹೆಸರುವಾಸಿಯಾಗಿದೆ. ದೇವಾಲಯವು ಕೆಂಗೇರಿ ಬಸ್ಸು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ. == ವಾಸ್ತುಶಿಲ್ಪ == ಈ ದೇವಾಲಯದ ಚಾವಣಿಯ ಮೇಲೆ ೩೦ ಅಡಿ ಎತ್ತರವಿರುವ ಚಿನ್ನದ ಬಣ್ಣದ ಪಂಚಮುಖಿ ಗಣೇಶನ ವಿಗ್ರಹವನ್ನು ನಿರ್ಮಿಸಲಾಗಿದೆ. ದೇವಾಲಯದ ಗರ್ಭಗುಡಿಯೊಳಗೆ ೬ ಅಡಿ ಎತ್ತರದ ಪಂಚಮುಖಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಒಳಭಾಗವು ಅಮೃತಶಿಲೆಯ ಕಲ್ಲುಗಳಿಂದ ಮಾಡಲ್ಪಟ್ಟಿದೆ. ದೇವಾಲಯದ ಒಳಗೆ ಮತ್ತು ಪ್ರಾಂಗಣದಲ್ಲಿ ನೀರಿನ ಸಣ್ಣ ಕೊಳಗಳಿವೆ. == ದೇವಾಲಯದ ವಿಶೇಷತೆಗಳು == ಮೇರು ವಿನ್ಯಾಸದಲ್ಲಿ ದೇವಾಲಯವು ರಚಿತವಾಗಿರುವುದರಿಂದ ಇದನ್ನು ಮಹಾಮೇರು ಪಂಚಮುಖ ಗಣೇಶ ದೇವಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಗುರುಗಳ ಆಶ್ರಮವೂ ಸಹ ಇದ್ದು ಆಗಾಗ ಭಜನೆಗಳು ಹಾಗೂ ಪ್ರವಚನಗಳು ನಡೆಯುತ್ತಿರುತ್ತವೆ. ಇಲ್ಲಿ ಒಟ್ಟು ೩೨ ಗಣೇಶನ ಪ್ರತಿಮೆಗಳಿದ್ದು ಅವು ಗಣೇಶನ ೩೨ ವಿವಿಧ ಅವತಾರದ ರೂಪಗಳನ್ನು ಪ್ರತಿನಿಧಿಸುತ್ತದೆ. == ಹಬ್ಬ/ಉತ್ಸವಗಳು == ಆಚರಿಸಲಾಗುವ ಮುಖ್ಯ ಹಬ್ಬಗಳೆಂದರೆ, ಗುರು ಪೂರ್ಣಿಮಾ - ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಹಿಂದೂಗಳು, ಬೌದ್ಧರು ಮತ್ತು ಜೈನರು ತಮ್ಮ ಶಿಕ್ಷಕರನ್ನು ಪೂಜಿಸಲು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಹಬ್ಬವನ್ನು ಆಷಾಢಮಾಸ (ಜೂನ್-ಜುಲೈ)ದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ . ಸಂಕಷ್ಟ ಚತುರ್ಥಿ - ಗಣೇಶನಿಗೆ ಅರ್ಪಿತವಾದ ಶುಭ ದಿನ. ಇದನ್ನು ತಿಂಗಳ ಕೃಷ್ಣ ಪಕ್ಷದ ೪ ನೇ ದಿನದಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ - ಗಣೇಶನ ಜನ್ಮ ದಿನವನ್ನು ಆಚರಿಸುವ ಹಿಂದೂ ಹಬ್ಬ. ಇದು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳುಗಳಲ್ಲಿ ಬರುತ್ತದೆ. == ಉಲ್ಲೇಖಗಳು ==